ಆಲ್ ಇಸ್ಲಾಂ ಲೈಬ್ರರಿ

72 - The Jinn - Al-Jinn

:1

(ಸಂದೇಶವಾಹಕರೇ,) ಹೇಳಿರಿ, ನನಗೆ ಹೀಗೆ ದಿವ್ಯ ಸಂದೇಶ ದೊರೆತಿದೆ- ಜಿನ್ನ್‍ಗಳ ಒಂದು ತಂಡವು ಖುರ್‍ಆನನ್ನು ಶ್ರದ್ಧಾಪೂರ್ವಕ ಆಲಿಸಿತು ತರುವಾಯ (ಸ್ವಂತ ಸಮೂಹದೊಡನೆ) ಹೀಗೆ ಹೇಳಿತು `ನಾವು ಒಂದು ಅತ್ಯದ್ಭುತ ಖುರ್‍ಆನನ್ನು ಆಲಿಸಿದ್ದೇವೆ.’

:2

ಅದು (ಖುರ್‍ಆನ್) ಸನ್ಮಾರ್ಗದ ಕಡೆಗೆ ಮಾರ್ಗದರ್ಶನ ನೀಡುತ್ತದೆ. ಆದುದರಿಂದ ನಾವು ಅದರ ಮೇಲೆ ವಿಶ್ವಾಸವಿರಿಸಿದೆವು. ಇನ್ನು ಮೇಲೆ ನಮ್ಮ ಪ್ರಭುವಿನೊಂದಿಗೆ ಯಾರನ್ನೂ ನಾವು ಸಹಭಾಗಿಯಾಗಿ ಮಾಡಲಾರೆವು.

:3

ನಮ್ಮ ಪ್ರಭುವಿನ ಮಹತ್ವವು ಅತ್ಯುನ್ನತವಾಗಿದೆ. ಅವನು ಯಾರನ್ನೂ ತನ್ನ ಸಂಗಾತಿ ಅಥವಾ ಪುತ್ರನಾಗಿ ಮಾಡಿಕೊಂಡಿಲ್ಲ.

:4

ಅಲ್ಲದೆ, ನಮ್ಮ ಕೂಟದಲ್ಲಿರುವ ತಿಳಿಗೇಡಿಗಳು ಅಲ್ಲಾಹನ ಕುರಿತು ಘೋರ ಅತಿರೇಕವನ್ನು ಹೇಳುತ್ತಿದ್ದರು.

:5

ಜಿನ್ನ್‍ಗಳು ಮತ್ತು ಮಾನವರು ಅಲ್ಲಾಹನ ಹೆಸರಲ್ಲಿ ಎಂದೂ ಸುಳ್ಳು ಹೇಳಲಾರರೆಂದು ನಾವು ಭಾವಿಸಿಕೊಂಡಿದ್ದೆವು.

:6

ಮಾನವರ ಪೈಕಿ ಕೆಲವು ವ್ಯಕ್ತಿಗಳು ಜಿನ್ನ್‍ಗಳ ಪೈಕಿ ಕೆಲವು ವ್ಯಕ್ತಿಗಳಲ್ಲಿ ಅಭಯ ಬೇಡುತ್ತಿದ್ದರು. ಹೀಗೆ ಅವರು ಜಿನ್ನ್‍ಗಳ ಅಹಂಕಾರವನ್ನು ಇನ್ನಷ್ಟು ಹೆಚ್ಚಿಸಿದರು.

:7

ಅವರು (ಮಾನವರು) ಕೂಡಾ ನೀವು ಭಾವಿಸಿದಂತೆಯೇ ಅಲ್ಲಾಹನು ಯಾರನ್ನೂ ಪುನರುಜ್ಜೀವಗೊಳಿಸಲಾರನೆಂದು ಭಾವಿಸಿ ಕೊಂಡಿದ್ದರು.

:8

ನಾವು ಆಕಾಶವನ್ನು ಸ್ಪರ್ಶಿಸಿ ನೋಡಿದಾಗ ಅದು ಸಶಕ್ತ ಕಾವಲುಗಾರರಿಂದ ಮತ್ತು ಅಗ್ನಿಜ್ವಾಲೆಗಳಿಂದ ತುಂಬಿರುವುದನ್ನು ಕಂಡೆವು.

:9

ಹಿಂದೆ ನಾವು ಕದ್ದಾಲಿಸಲಿಕ್ಕಾಗಿ ಆಕಾಶದ ಕೆಲವು ಕಡೆಗಳಲ್ಲಿ ಕುಳಿತುಕೊಳ್ಳುತ್ತಿದ್ದೆವು. ಆದರೆ ಈಗ ಯಾವನಾದರೂ ಕದ್ದಾಲಿಸಲು ಪ್ರಯತ್ನಿಸುವು ದಾದರೆ ಅವನು ತನಗಾಗಿ ಹೊಂಚು ಹಾಕುತ್ತಿರುವ ಒಂದು ಅಗ್ನಿಜ್ವಾಲೆ (ಉಲ್ಕೆ)ಯನ್ನು ಕಾಣುತ್ತಾನೆ.

:10

ಭೂಮಿಯ ನಿವಾಸಿಗಳಿಗೆ ಕೆಡುಕನ್ನು ಉದ್ದೇಶಿ ಸಲಾಗಿದೆಯೋ? ಅಥವಾ ಅವರ ಪ್ರಭುವು ಅವರಿಗೆ ಸನ್ಮಾರ್ಗವನ್ನು ತೋರಿಸ ಬಯಸಿರುವನೋ? ಎಂದೇನೂ ನಮಗೆ ತಿಳಿಯದು.

:11

ನಮ್ಮ ಕೂಟದಲ್ಲಿ ಸಜ್ಜನರಿದ್ದಾರೆ ಮತ್ತು ಅದರ ಕೆಳಗಿನವರೂ ನಮ್ಮಲ್ಲಿದ್ದಾರೆ. ನಾವು ನಾನಾ ದಾರಿಗಳಲ್ಲಿ ಹರಿಹಂಚಿ ಹೋಗಿದ್ದೇವೆ.

:12

ನಮಗೆ ಭೂಮಿಯಲ್ಲಿ ಅಲ್ಲಾಹನನ್ನು ಸೋಲಿಸಲಾಗದು ಮತ್ತು ನಾವು ತಪ್ಪಿಸಿ ಓಡಿ ಹೋಗಿಯೂ ಅವನನ್ನು ಸೋಲಿಸಲಾರೆವು ಎಂದು ನಾವು ಖಚಿತಪಡಿಸಿಕೊಂಡಿರುತ್ತೇವೆ.

:13

ನಾವು ಸನ್ಮಾರ್ಗ (ಖುರ್‍ಆನ್)ವನ್ನು ಕೇಳಿದಾಗ ಅದರಲ್ಲಿ ವಿಶ್ವಾಸವಿರಿಸಿದೆವು. ತನ್ನ ಪ್ರಭುವಿನ ಮೇಲೆ ಯಾವನು ವಿಶ್ವಾಸವಿರಿಸುವನೋ ಅವನು ಅಲ್ಲಾಹನಿಂದ ಯಾವುದೇ ನಷ್ಟವನ್ನೂ, ಅನೀತಿಯನ್ನೂ ಭಯಪಡಬೇಕಾಗಿಲ್ಲ.

:14

ನಮ್ಮ ಕೂಟದಲ್ಲಿ ವಿಧೇಯರು (ಮುಸ್ಲಿಮರು) ಇದ್ದಾರೆ. ಅನ್ಯಾಯಗಾರರೂ ನಮ್ಮಲ್ಲಿ ಇದ್ದಾರೆ. ಯಾರು ವಿಧೇಯರಾಗುತ್ತಾರೋ (ಇಸ್ಲಾಮನ್ನು ಸ್ವೀಕರಿಸಿಕೊಳ್ಳುತ್ತಾರೋ) ಅವರು ಸತ್ಪಥವನ್ನು ಕಂಡುಕೊಂಡರು.

:15

ಯಾರು ಅನ್ಯಾಯಗಾರರೋ ಅವರು ನರಕದ ಇಂಧನವಾಗುವರು.

:16

(ಅಲ್ಲಾಹು ಹೇಳುತ್ತಾನೆ) ಅವರು ಸನ್ಮಾರ್ಗದಲ್ಲಿ ಸ್ಥಿರಚಿತ್ತರಾಗಿ ನಿಲ್ಲುತ್ತಿದ್ದರೆ, ನಾವು ಅವರಿಗೆ ಕುಡಿಯಲು ಧಾರಾಳ ನೀರನ್ನು ಕೊಡುತ್ತಿದ್ದೆವು.

:17

ಅದರಲ್ಲಿ (ಈ ಅನುಗ್ರಹದ ಮೂಲಕ) ಅವರನ್ನು ಪರೀಕ್ಷಿಸಲಿಕ್ಕಾಗಿ. ಯಾರು ತನ್ನ ಪ್ರಭುವಿನ ದಿಕ್‍ರ್‍ನಿಂದ (ಖುರ್‍ಆನ್‍ನಿಂದ) ವಿಮುಖ ನಾಗುವನೋ, ಅವನನ್ನು ಅವನ ಪ್ರಭುವು ಕಠಿಣ ಸಜೆಗೆ ಗುರಿಪಡಿಸುವನು.

:18

ಮಸೀದಿಗಳು ಅಲ್ಲಾಹನಿಗಿರುವುದಾಗಿವೆ. ಆದುದರಿಂದ ಅವುಗಳಲ್ಲಿ ಅಲ್ಲಾಹನೊಂದಿಗೆ ಇತರ ಯಾರನ್ನೂ ಆರಾಧಿಸಬೇಡಿರಿ .

:19

ಅಲ್ಲಾಹನ ದಾಸನು (ಪ್ರವಾದಿ) ಅವನನ್ನು ಆರಾಧಿಸುತ್ತಾ ನಿಂತಾಗ, ಅವರು (ಜಿನ್ನ್‍ಗಳು) ಆ ದಾಸನ ಸುತ್ತ ಕೂಟ-ಕೂಟವಾಗಿ ಕಿಕ್ಕಿರಿದು ತುಂಬ ಹತ್ತಿದರು.

:20

(ಸಂದೇಶವಾಹಕರೇ,) ತಾವು ಹೇಳಿರಿ; ನಾನು ನನ್ನ ಪ್ರಭುವನ್ನು ಮಾತ್ರ ಆರಾಧಿಸುತ್ತೇನೆ. ನಾನು ಅವನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡುವುದಿಲ್ಲ.

:21

ಹೇಳಿರಿ; ನಿಮಗೆ ಯಾವುದೇ ಹಾನಿ ಮಾಡಲಿಕ್ಕಾಗಲಿ, ಸನ್ಮಾರ್ಗ ನೀಡಲಿಕ್ಕಾಗಲಿ ನಾನು ಒಡೆತನ (ಅಧಿಕಾರ) ಹೊಂದಿಲ್ಲ.

:22

ಹೇಳಿರಿ; ಅಲ್ಲಾಹನ ಶಿಕ್ಷೆಯಿಂದ ಯಾರೂ ನನ್ನನ್ನು ರಕ್ಷಿಸಲಾರರು. ಮತ್ತು ಅವನ ಹೊರತು ಯಾವುದೇ ಅಭಯ ಸ್ಥಾನವನ್ನು ನಾನೆಂದೂ ಕಂಡುಕೊಳ್ಳಲಾರೆನು.

:23

ಅಲ್ಲಾಹನ ಸಂದೇಶಗಳನ್ನು ತಲುಪಿಸುವ ಮತ್ತು ಅವನ ದೌತ್ಯವನ್ನು ನಿರ್ವಹಿಸುವ ಹೊರತು (ಬೇರೇನೂ ನನ್ನ ಅಧೀನತೆಯಲ್ಲಿಲ್ಲ.) ಯಾರು ಅಲ್ಲಾಹನ ಮತ್ತು ಅವನ ದೂತರನ್ನು ದಿಕ್ಕರಿಸುತ್ತಾರೋ ಅವನಿಗೆ ನರಕಾಗ್ನಿ ಇದೆ. ಅದರಲ್ಲಿ ಅವರು ಚಿರವಾಸಿಗಳಾಗಿರುವರು ಎಂದೆಂದಿಗೂ.

:24

ಅವರಿಗೆ ತಾಕೀತು ನೀಡಲಾಗುತ್ತಿರುವುದನ್ನು (ಶಿಕ್ಷೆ) ಕಣ್ಣಾರೆ ಕಂಡುಕೊಳ್ಳುವಾಗ ಯಾರ ಸಹಾಯಕರು ಅತ್ಯಂತ ದುರ್ಬಲರು ಮತ್ತು ಸಂಖ್ಯೆಯಲ್ಲಿ ಅತ್ಯಲ್ಪರು ಎಂಬುದು ಅವರಿಗೆ ತಿಳಿದು ಬಿಡುವುದು.

:25

ತಾವು ಹೇಳಿರಿ; ನಿಮಗೆ ಏನನ್ನು ತಾಕೀತು ನೀqಲಾಗುತ್ತಿದೆಯೋ ಅದು (ಶಿಕ್ಷೆ) ಸದ್ಯವೇ ಸಂಭವಿಸುವುದೋ ಅಥವಾ ನನ್ನ ಪ್ರಭು ಅದಕ್ಕೆ (ದೀರ್ಘವಾದ) ಅವಧಿ ನಿಶ್ಚಯಿಸುವನೋ ಎಂಬುದು ನನಗೆ ತಿಳಿದಿಲ್ಲ.

:26

ಅವನು ಅದೃಶ್ಯ ಜ್ಞಾನಿಯಾಗಿದ್ದಾನೆ. ಅವನು ತನ್ನ ಅದೃಶ್ಯ ಜ್ಞಾನವನ್ನು ಯಾರಿಗೂ ಬಹಿ ರಂಗಪಡಿಸುವುದಿಲ್ಲ.

:27

ತಾನು ಮೆಚ್ಚಿಕೊಂಡ ಯಾವುದೇ ದೂತರಿಗೆ ಹೊರತು. ಆಗ ಆ ದೂತರ ಮುಂದೆಯೂ ಹಿಂದೆ ಯೂ ಅವನು ಕಾವಲುಗಾರರನ್ನು ಖಂಡಿತ ಏರ್ಪಡಿಸುವನು.

:28

ಅದು ಅವರು ತಮ್ಮ ಪ್ರಭುವಿನ ಸಂದೇಶಗಳನ್ನು ತಲುಪಿಸಿರುವರೆಂಬುದನ್ನು ಅವನು ಪ್ರತ್ಯಕ್ಷವಾಗಿ ತಿಳಿಯಲಿಕ್ಕಾಗಿ, ಅವರ ಬಳಿ ಇರುವುದನ್ನು ಅವನು ಸಂಪೂರ್ಣವಾಗಿ ಅರಿತಿರುತ್ತಾನೆ ಮತ್ತು ಪ್ರತಿಯೊಂದು ವಸ್ತುವನ್ನೂ ಅವನು ಲೆಕ್ಕ ಮಾಡಿಟ್ಟಿರುತ್ತಾನೆ.