ಆಲ್ ಇಸ್ಲಾಂ ಲೈಬ್ರರಿ

71 - Noah - Nūĥ

:1

ನೂಹರನ್ನು ಅವರ ಜನಾಂಗದ ಕಡೆಗೆ ನಾವು ಕಳುಹಿಸಿದೆವು. ``ನಿನ್ನ ಜನಾಂಗದವರಿಗೆ ವೇದನಾಯುಕ್ತ ಶಿಕ್ಷೆ ಬಂದೆರಗುವುದಕ್ಕೆ ಮುಂಚೆಯೇ ಅವರಿಗೆ ಮುನ್ನೆಚ್ಚರಿಕೆ ನೀಡು’’ ಎಂಬ ಆದೇಶದೊಂದಿಗೆ.

:2

ಅವರು ಹೇಳಿದರು; `ನನ್ನ ಜನಾಂಗದವರೇ, ನಾನು ನಿಮಗೆ ಸ್ಪಷ್ಟ ಎಚ್ಚರಿಕೆ ಕೊಡುವವನಾಗಿದ್ದೇನೆ.

:3

ನೀವು ಅಲ್ಲಾಹನನ್ನು ಆರಾಧಿಸಿರಿ, ಅವನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.

:4

ಹಾಗಾದರೆ ಅಲ್ಲಾಹನು ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ನಿಮ್ಮನ್ನು ಒಂದು ನಿಶ್ಚಿತ ಕಾಲದವರೆಗೆ ಮುಂದೂಡುವನು. ಅಲ್ಲಾಹನ ಅವಧಿ ಬಂದು ಬಿಟ್ಟರೆ ಮತ್ತೆ ಅದನ್ನು ಮುಂದೂಡಲಾಗುವುದಿಲ್ಲ. ನಿಮಗಿದು ತಿಳಿದಿರುತ್ತಿದ್ದರೆ!

:5

ಅವರು (ನೂಹ್) ಹೇಳಿದರು; `ನನ್ನ ಪ್ರಭೂ, ನಾನು ನನ್ನ ಜನಾಂಗದವರನ್ನು ರಾತ್ರಿಯೂ ಹಗಲೂ (ನಿನ್ನ ಮಾರ್ಗಕ್ಕೆ) ಕರೆದೆನು.

:6

ಆದರೆ ನನ್ನ ಕರೆಯು ಅವರ ಪಲಾಯನವನ್ನೇ ಹೆಚ್ಚಿಸಿತು.

:7

ನೀನು ಅವರನ್ನು ಕ್ಷಮಿಸಲೆಂದು ನಾನು ಅವರನ್ನು ಕರೆದಾಗಲೆಲ್ಲ ಅವರು ತಮ್ಮ ಕಿವಿಗಳಲ್ಲಿ ಬೆರಳುಗಳನ್ನು ತುರುಕಿಸಿಕೊಂಡರು, ತಮ್ಮ ವಸ್ತ್ರಗಳಿಂದ (ಮುಖ) ಮುಚ್ಚಿಕೊಂಡರು, (ಅಸತ್ಯದಲ್ಲಿ) ಊರಿ ನಿಂತರು. ಮತ್ತು ಭಾರೀ ಅಹಂಭಾವ ತೋರಿದರು.

:8

ತರುವಾಯ ನಾನು ಅವರಿಗೆ ಜೋರಾಗಿ ಕರೆಕೊಟ್ಟೆನು.

:9

ಅನಂತರ ನಾನು ಅವರಿಗಾಗಿ ಬಹಿರಂಗ ಆಹ್ವಾನ ನೀಡಿದೆನು ಮತ್ತು ಬಹಳ ರಹಸ್ಯವಾಗಿಯೂ ಬೋಧಿಸಿದೆನು.

:10

ನಾನು ಹೇಳಿದೆನು; ನಿಮ್ಮ ಪ್ರಭುವಿನಲ್ಲಿ ನೀವು ಕ್ಷಮೆಯನ್ನು ಯಾಚಿಸಿರಿ. ಖಂಡಿತವಾಗಿಯೂ ಅವನು ಮಹಾಕ್ಷಮಾಶೀಲನಾಗಿದ್ದಾನೆ.

:11

ಹಾಗಾದಲ್ಲಿ ನಿಮಗೆ ಅವನು ಆಕಾಶದಿಂದ ಸಮೃದ್ಧವಾಗಿ ಮಳೆ ಸುರಿಸಿ ಕೊಡುವನು.

:12

ನಿಮಗೆ ಸೊತ್ತುಗಳನ್ನೂ ಸಂತಾನಗಳನ್ನೂ ಕೊಟ್ಟು ಪೋಷಿಸುವನು, ನಿಮಗಾಗಿ ತೋಟ ಗಳನ್ನೂ ನದಿಗಳನ್ನೂ ನಿರ್ಮಿಸಿ ಕೊಡುವನು.

:13

ಅಲ್ಲಾಹು ನಿಮ್ಮನ್ನು ಗೌರವಿಸುವುದನ್ನು ಯಾಕೆ ನೀವು ಆಗ್ರಹಪಡುವುದಿಲ್ಲ?

:14

ಅವನು ನಿಮ್ಮನ್ನು ವಿವಿಧ ಹಂತಗಳಲ್ಲಿ ಸೃಷ್ಟಿಸಿರುವನು.

:15

ನೀವು ನೋಡುತ್ತಿಲ್ಲವೇ? ಅಲ್ಲಾಹನು ಸಪ್ತಗಗನಗಳನ್ನು (ಒಂದರ ಮೇಲೆ ಒಂದರಂತೆ) ಅಂತಸ್ತುಗಳಾಗಿ ಹೇಗೆ ಸೃಷ್ಟಿಸಿದನು?

:16

ಮತ್ತು ಅವುಗಳಲ್ಲಿ ಚಂದ್ರನನ್ನು ಒಂದು ಪ್ರಕಾಶವಾಗಿಯೂ ಸೂರ್ಯನನ್ನು ಒಂದು ಬೆಳಕಾಗಿಯೂ ಮಾಡಿರುವನು.

:17

ಅಲ್ಲಾಹನು ನಿಮ್ಮನ್ನು ಭೂಮಿಯಿಂದ ಬೆಳೆ ಬೆಳೆಸಿದನು.

:18

ಮುಂದೆ ಅವನು ನಿಮ್ಮನ್ನು ಅದಕ್ಕೆ ಮರಳಿ ಸುವನು ಮತ್ತು ಅದರಿಂದ ಒಮ್ಮೆಲೇ ನಿಮ್ಮನ್ನು ಹೊರತೆಗೆಯುವನು.

:19

ಅಲ್ಲಾಹನು ನಿಮಗಾಗಿ ಭೂಮಿಯನ್ನು ಒಂದು ಹಾಸನ್ನಾಗಿ ಮಾಡಿದನು.

:20

ನೀವು ಅದರಲ್ಲಿ ವಿಶಾಲವಾದ ಮಾರ್ಗಗಳಲ್ಲಿ ಪ್ರವೇಶಿಸುವಂತಾಗಲು.

:21

ನೂಹ್ ಹೇಳಿದರು; `ನನ್ನ ಪ್ರಭೂ, ಅವರು ನನ್ನನ್ನು ಧಿಕ್ಕರಿಸಿದರು. ಸಂಪತ್ತು ಹಾಗೂ ಸಂತಾನಗಳನ್ನು ಪಡೆದು ನಷ್ಟವನ್ನು ಇನ್ನಷ್ಟು ಹೆಚ್ಚಿಸಿಕೊಂಡಿರುವ ಕೆಲವರನ್ನು ಅವರು ಅನುಸರಿಸಿದರು.

:22

ಅವರು ಬಹುದೊಡ್ಡ ಕುತಂತ್ರವನ್ನು ಹೂಡಿದರು.

:23

ಅವರು, `(ಜನರೇ) ನೀವು ಖಂಡಿತ ನಿಮ್ಮ ದೈವಗಳನ್ನು ತ್ಯಜಿಸಬೇಡಿರಿ. ವದ್ದ್, ಸುವಾಅï, ಯಗೂಸ್, ಯಊಖ್ ಮತ್ತು ನಸ್ರ್‍ಗಳನ್ನು ನೀವು ಖಂಡಿತ ಉಪೇಕ್ಷಿಸದಿರಿ’ ಎಂದು ಹೇಳಿದರು.

:24

ಅವರು ಅನೇಕ ಮಂದಿಯನ್ನು ದಾರಿಗೆಡಿಸಿದ್ದಾರೆ. (ಆದುದರಿಂದ ಪ್ರಭೂ!) ನೀನು ಈ ಅಕ್ರಮಿಗಳಿಗೆ ಪಥಭ್ರಷ್ಟತೆಯಲ್ಲದೆ ಬೇರೇನನ್ನೂ ವರ್ಧಿಸಿ ಕೊಡಬೇಡ.

:25

ತಮ್ಮ ಪಾಪಗಳ ಕಾರಣದಿಂದಾಗಿಯೇ ಅವರು ನೀರಲ್ಲಿ ಮುಳುಗಿಸಲ್ಪಟ್ಟರು ಮತ್ತು ನರಕಾಗ್ನಿಗೆ ಸೇರಿಸಲ್ಪಟ್ಟರು. ಅನಂತರ ಅವರಿಗೆ, ಅಲ್ಲಾಹನ ಹೊರತು ಸಹಾಯಕನಾರೂ ಲಭಿಸಲಿಲ್ಲ.

:26

ನೂಹ್ ಹೇಳಿದರು; `ನನ್ನ ಪ್ರಭೂ, ಸತ್ಯನಿಷೇಧಿಗಳ ಪೈಕಿ ಯಾವನೇ ಗೃಹಸ್ಥನನ್ನು (ಯಾರನ್ನೂ) ಈ ಭೂಮಿಯ ಮೇಲೆ ನೆಲೆಸಲು ಬಿಡಬೇಡ.

:27

ನೀನು ಅವರನ್ನು ನಾಶಪಡಿಸದೆ ಹಾಗೆ ಬಿಟ್ಟರೆ, ಅವರು ನಿನ್ನ ದಾಸರನ್ನು ದಾರಿಗೆಡಿಸುವರು. ಮತ್ತು ಸತ್ಯನಿಷೇಧಿಗಳಾದ ದುರಾಚಾರಿ ಸಂತತಿಗಳನ್ನಲ್ಲದೆ ಅವರು ಹುಟ್ಟುಹಾಕಲಾರರು.

:28

ನನ್ನ ಪ್ರಭೂ, ನನಗೂ, ನನ್ನ ಮಾತಾಪಿತರಿಗೂ ಸತ್ಯವಿಶ್ವಾಸಿಯಾಗಿ ನನ್ನ ಮನೆಗೆ ಪ್ರವೇಶಿಸಿದ ಪ್ರತಿಯೊಬ್ಬರಿಗೂ ಮತ್ತು ಎಲ್ಲ ಸತ್ಯವಿಶ್ವಾಸಿ ಸ್ತ್ರೀ - ಪುರುಷರಿಗೂ ನೀನು ಕ್ಷಮೆ ನೀಡು. ಅಕ್ರಮಿಗಳಿಗೆ ವಿನಾಶದ ಹೊರತು ಇನ್ನೇನನ್ನೂ ವರ್ಧಿಸ ಬೇಡ.