ಆಲ್ ಇಸ್ಲಾಂ ಲೈಬ್ರರಿ

51 - The Winnowing Winds - Adh-Dhāriyāt

:1

ಧೂಳೆಬ್ಬಿಸುವ ಗಾಳಿಗಳ ಆಣೆ.

:2

ಭಾರವೇರಿದ ಘನೀಕೃತ ಮೋಡಗಳ ಆಣೆ.

:3

ಅನಾಯಾಸವಾಗಿ ಚಲಿಸುತ್ತಿರುವ ಹಡಗುಗಳ ಆಣೆ.

:4

ಯೋಜನೆಗಳನ್ನು ವಿತರಿಸುವ ದೇವಚರರುಗಳಾಣೆ.

:5

ಖಂಡಿತವಾಗಿಯೂ ನಿಮಗೆ ತಾಕೀತು ನೀಡಲಾದ ವಿಷಯಗಳು ಪರಮಸತ್ಯ.

:6

(ಅಂತ್ಯ ದಿನದ) ವಿಧಿಯ ತೀರ್ಪು ಖಂಡಿತವಾಗಿಯೂ ಸಂಭವನೀಯವಾಗಿದೆ .

:7

ವಿವಿಧ ಪಥಗಳಿರುವ ಗಗನದ ಆಣೆ.

:8

ನಿಜವಾಗಿಯೂ ನೀವು ವಿಭಿನ್ನ ಅಭಿಪ್ರಾಯಗಳಲ್ಲೇ ಇದ್ದೀರಿ .

:9

ವಿಮುಖನಾಗಲ್ಪಟ್ಟವನು ನಬಿಯವರಿಂದ ವಿಮುಖನಾಗಲ್ಪಡುವನು.

:10

ಸುಳ್ಳುಗಾರರು ಶಪಿಸಲ್ಪಟ್ಟಿರುವರು .

:11

ಅವರು ಅಜ್ಞಾನದ ಮಡುವಿನಲ್ಲಿ ಮುಳುಗಿ ನಿರ್ಲಕ್ಷ್ಯರಾಗಿರುವರು.

:12

ಪ್ರತಿಫಲದ ದಿನ ಯಾವಾಗ ಬರಲಿದೆ? ಎಂದು ಅವರು ಕುಚೋದ್ಯವಾಡುತ್ತಿದ್ದಾರೆ.

:13

ಅದು, ಅವರು ಅಗ್ನಿಯಲ್ಲಿ ಶಿಕ್ಷಿಸಲ್ಪಡುವಂದು (ಬರಲಿದೆ.)

:14

ಈಗ ನೀವು ನಿಮ್ಮ ವಿನಾಶದ ರುಚಿಯನ್ನು ಸವಿಯಿರಿ. ನೀವು ಯಾವುದಕ್ಕಾಗಿ ಇಹದಲ್ಲಿ ತ್ವರೆ ಮಾಡುತ್ತಿದ್ದಿರೋ ಅದುವೇ ಇದು. (ಎಂದು ಅವರೊಡನೆ ಹೇಳಲಾಗುವುದು.)

:15

ಖಂಡಿತವಾಗಿಯೂ ಧರ್ಮನಿಷ್ಟರು ಅಂದು ಉದ್ಯಾನಗಳಲ್ಲೂ ಚಿಲುಮೆಗಳಲ್ಲೂ ಇರುವರು.

:16

ಅವರ ಪ್ರಭು ಅವರಿಗೆ ದಯಪಾಲಿಸಿದ್ದನ್ನು ಸಂತೋಷದಿಂದ ಸ್ವೀಕರಿಸುತ್ತಿರುವರು. ಅವರು ಅದಕ್ಕೂ ಮುನ್ನ ಸಚ್ಚರಿತರಾಗಿದ್ದರು.

:17

ರಾತ್ರೆಯಲ್ಲಿ ಅವರು ಸ್ವಲ್ಪ ಸಮಯವೇ ನಿದ್ರಿಸುತ್ತಿದ್ದರು

:18

ಅವರು ರಾತ್ರಿಯ ಕೊನೆಯ ಜಾವಗಳಲ್ಲಿ ಕ್ಷಮಾಯಾಚನೆ ಮಾಡುತ್ತಿದ್ದರು.

:19

ಅವರ ಸೊತ್ತುಗಳಲ್ಲಿ ಬೇಡುವವನಿಗೂ ಬೇಡಲು ತಟಸ್ಥವಿದ್ದವನಿಗೂ ಹಕ್ಕಿರುವುದು.

:20

ದೃಢ ವಿಶ್ವಾಸಿಗಳಿಗೆ ಭೂಮಿಯಲ್ಲಿ ಅಸಂಖ್ಯಾತ ನಿದರ್ಶನಗಳಿವೆ.

:21

ಸ್ವತಃ ನಿಮ್ಮಲ್ಲೂ (ನಿದರ್ಶನಗಳು) ಇವೆ. ನೀವು ಕಂಡರಿಯುವುದಿಲ್ಲವೇ?

:22

ಆಕಾಶದಲ್ಲಿ ನಿಮ್ಮ ಜೀವನಾಧಾರವೂ ನಿಮಗೆ ವಾಗ್ದಾನ ಮಾಡಲಾಗುತ್ತಿರುವವುಗಳೂ ಇವೆ .

:23

ಆದುದರಿಂದ ಆಕಾಶ ಮತ್ತು ಭೂಮಿಯ ಪ್ರಭುವಿನಾಣೆ, ಇದು ಸತ್ಯವಾಗಿದೆ. ನೀವು ಆ ಕುರಿತು ಮಾತನಾಡಿಕೊಳ್ಳುವಷ್ಟೇ ಅದು ಖಚಿತವಾಗಿದೆ.

:24

(ಸಂದೇಶವಾಹಕರೇ,) ಇಬ್‍ರಾಹೀಮರ ಮಾನ್ಯ ಅತಿಥಿಗಳ ವೃತ್ತಾಂತವು ನಿಮಗೆ ತಲುಪಿದೆಯೇ?

:25

ಅವರು, ಅವರ (ಇಬ್ರಾಹೀಮರ) ಬಳಿಗೆ ಬಂದು ಸಲಾಮ್ ಹೇಳಿದ ಸಂದರ್ಭ, ಅವರು (ಇಬ್‍ರಾ ಹೀಮ್) ಸಲಾಮ್, ನೀವು ಅಪರಿಚಿತರು ಎಂದರು.

:26

ಅನಂತರ ಅವರು ದೃತಿಯಿಂದ ತಮ್ಮ ಮನೆ ಯವರ ಬಳಿಗೆ ಹೋದರು. ಆಮೇಲೆ ಒಂದು ಕೊಬ್ಬಿದ ಕರುವನ್ನು (ಬೇಯಿಸಿ) ತಂದರು.

:27

ತರುವಾಯ ಅದನ್ನು ಅವರ ಹತ್ತಿರ ಇಟ್ಟರು. ನೀವು ತಿನ್ನುವುದಿಲ್ಲವೇ? ಎಂದು ಕೇಳಿದರು.

:28

(ಅವರು ತಿನ್ನಲಿಲ್ಲ) ಆಗ ಇಬ್‍ರಾಹೀಮರು ಅವರ ಬಗೆಗೆ ಅಂಜಿದರು. ಆಗ ಅತಿಥಿಗಳು; `ತಾವು ಹೆದರಬೇಡಿ’ ಎಂದರು ಮತ್ತು ಅವರಿಗೆ ಓರ್ವ ಸುಜ್ಞಾನಿ ಪುತ್ರನು ಜನಿಸುವನೆಂಬ ಸುವಾರ್ತೆ ನೀಡಿದರು .

:29

ಆಗ ಅವರ ಪತ್ನಿಯು ಚೀರುತ್ತ ಮುಂದೆ ಬಂದರು ಮತ್ತು ತನ್ನ ಮುಖಕ್ಕೆ ಬಡಿದುಕೊಳ್ಳುತ್ತ, ಬಂಜೆಯಾದ ಓರ್ವ ವೃದ್ಧೆ! (ಹೆರುವುದು ಹೇಗೆ?) ಎಂದು ಕೇಳಿದರು.

:30

ಆಗ ಅತಿಥಿಗಳು; “ನಿನ್ನ ಪ್ರಭು ಹೀಗೆಯೇ ಹೇಳಿರುತ್ತಾನೆ. ಅವನು ಮಹಾ ಯುಕ್ತಿವಂತನೂ, ಸರ್ವಜ್ಞನೂ ಆಗಿರುತ್ತಾನೆ”ಎಂದರು.

:31

ಇಬ್ರಾಹೀಮರು ಕೇಳಿದರು, ದೇವದೂತರೇ, ನಿಮ್ಮ ಉದ್ದೇಶವೇನು?

:32

ಅವರು ಹೇಳಿದರು, ನಾವು ಒಂದು ಅಪರಾಧಿ ಜನಾಂಗದೆಡೆಗೆ ಕಳುಹಿಸಲ್ಪಟ್ಟಿದ್ದೇವೆ.

:33

ಅವರ ಮೇಲೆ ಸುಡುಮಣ್ಣಿನ ಕಲ್ಲುಗಳ ಮಳೆಗರೆಯಲಿಕ್ಕಾಗಿ.

:34

ಆ ಕಲ್ಲುಗಳನ್ನು ಅತಿಕ್ರಮಿಗಳಿಗಾಗಿ ನಿಮ್ಮ ಪ್ರಭುವಿನ ಬಳಿ ಗುರುತು ಹಾಕಿಡಲಾಗಿದೆ.

:35

ಆ ನಾಡಿನಲ್ಲಿದ್ದ ಸತ್ಯವಿಶ್ವಾಸಿಗಳನ್ನೆಲ್ಲ ನಾವು ಅಲ್ಲಿಂದ ಹೊರಕಳುಹಿಸಿ ರಕ್ಷಿಸಿದೆವು.

:36

ಅಲ್ಲಿ ಮುಸ್ಲಿಮರ ಒಂದು ಮನೆಯ ಹೊರತು ಬೇರಾವ ಮನೆಯನ್ನೂ ನಾವು ಕಾಣಲಿಲ್ಲ.

:37

ವೇದನಾಯುಕ್ತ ಶಿಕ್ಷೆಯನ್ನು ಭಯಪಡುವ ಜನರಿಗಾಗಿ ಒಂದು ನಿದರ್ಶನವನ್ನು ಅಲ್ಲಿ ನಾವು ಉಳಿಸಿದೆವು.

:38

ಮೂಸಾರ ವೃತ್ತಾಂತದಲ್ಲಿ (ದೃಷ್ಟಾಂತಗಳಿವೆ). ಸುಸ್ಪಷ್ಟ ಆಧಾರ ಪ್ರಮಾಣದೊಂದಿಗೆ ಫಿರ್‍ಔನನ ಬಳಿಗೆ ನಾವು ಅವರನ್ನು ಕಳುಹಿಸಿದ ಸಂದರ್ಭ.

:39

ಅವನು ತನ್ನ ಸೈನಿಕ ಶಕ್ತಿಯ ಧೈರ್ಯದಿಂದ ಸತ್ಯಕ್ಕೆ ವಿಮುಖನಾದನು. ಮತ್ತು ಇವನು ಮಾಟಗಾರನೋ ಹುಚ್ಚನೋ ಆಗಿದ್ದಾನೆ ಎಂದನು.

:40

ಕೊನೆಗೆ ನಾವು ಅವನನ್ನೂ ಅವನ ಸೇನೆಗಳನ್ನೂ ಹಿಡಿದೆವು. ಅನಂತರ ಅವರನ್ನು ಸಮುದ್ರಕ್ಕೆ ಎಸೆದು ಬಿಟ್ಟೆವು ಮತ್ತು ಅವನು ನಿಂದ್ಯನಾಗಿ ಬಿಟ್ಟನು.

:41

`ಆದ್’ ಜನಾಂಗದಲ್ಲಿ (ದೃಷ್ಟಾಂತವಿದೆ). ನಾವು ಅವರ ಮೇಲೆ ಒಂದು ವಿನಾಶಕರ ಗಾಳಿಯನ್ನು ಕಳುಹಿಸಿದ ಸಂದರ್ಭ.

:42

ಅದು ಹಾದು ಹೋದ ಯಾವುದೇ ಒಂದು ವಸ್ತುವನ್ನೂ ಧೂಳೀಪಟದಂತೆ ಶಿಥಿಲಗೊಳಿಸದೆ ಬಿಟ್ಟಿಲ್ಲ.

:43

`ಸಮೂದ್’ ಜನಾಂಗದಲ್ಲೂ (ನಿದರ್ಶನವಿದೆ). ಒಂದು ನಿಶ್ಚಿತ ಕಾಲದವರೆಗೆ ನೀವು ಸುಖ ಭೋಗಗಳನ್ನು ಅನುಭವಿಸಿಕೊಳ್ಳಿರೆಂದು ಅವರೊಡನೆ ಹೇಳಲ್ಪಟ್ಟ ಸಂದರ್ಭ.

:44

ಆದರೆ, ಅವರು ತಮ್ಮ ಪ್ರಭುವಿನ ಆಜ್ಞೆಯ ವಿರುದ್ಧ ಧಿಕ್ಕಾರ ತೋರಿದರು. ಕೊನೆಗೆ ಅವರು ನೋಡುತ್ತಿದ್ದಂತೆಯೇ ಹಠಾತ್ತನೆ ಘೋರ ಶಬ್ದ ಅವರ ಮೇಲೆರಗಿತು.

:45

ಆಗ ಅವರಿಗೆ ಎದ್ದು ನಿಲ್ಲುವ ಶಕ್ತಿಯಾಗಲಿ ತಮ್ಮನ್ನು ರಕ್ಷಿಸಿಕೊಳ್ಳುವ ಸಾಮಥ್ರ್ಯವಾಗಲಿ ಉಳಿಯಲಿಲ್ಲ.

:46

ಅದಕ್ಕೂ ಮುಂಚೆ `ನೂಹ’ರ ಜನಾಂಗವನ್ನು (ನಾವು ನಾಶಗೊಳಿಸಿದೆವು.) ಅವರು ಕೂಡಾ ಕರ್ಮಭ್ರಪ್ಟರಾದ ಒಂದು ಜನಾಂಗವಾಗಿದ್ದರು.

:47

ನಾವು ಆಕಾಶವನ್ನು ನಮ್ಮ ಶಕ್ತಿಯಿಂದಲೇ ನಿರ್ಮಿಸಿರುತ್ತೇವೆ ಮತ್ತು ನಾವು ಅದನ್ನು ವಿಶಾಲಗೊಳಿಸುವವರಾಗಿದ್ದೇವೆ.

:48

ಭೂಮಿಯನ್ನು ನಾವು ಹಾಸಿರುತ್ತೇವೆ, ಅದನ್ನು ಜನ ವಾಸಯೋಗ್ಯಗೊಳಿಸಿದವನು ಎಷ್ಟು ಉತ್ತಮನು!

:49

ನಾವು ಪ್ರತಿಯೊಂದು ವಸ್ತುವಿಗೂ ಜೋಡಿಗಳನ್ನು ಸೃಷ್ಟಿಸಿರುತ್ತೇವೆ. ನೀವು ಚಿಂತಿಸುವಂತಾಗಲು.

:50

ಆದುದರಿಂದ (ತಾವು ಹೇಳಿರಿ;) ನೀವು ಅಲ್ಲಾಹನ ಕಡೆಗೆ ಧಾವಿಸಿರಿ. ನಾನು ನಿಮಗೆ ಅವನ ಕಡೆ ಯಿಂದ ಸುವ್ಯಕ್ತ ಎಚ್ಚರಿಕೆ ನೀಡುವವನಾಗಿದ್ದೇನೆ.

:51

ಅಲ್ಲಾಹನೊಂದಿಗೆ ಬೇರೆ ಆರಾಧ್ಯರನ್ನು ಮಾಡಿ ಕೊಳ್ಳಬೇಡಿರಿ. ನಾನು ನಿಮಗೆ ಅವನ ಕಡೆ ಯಿಂದ ಸುವ್ಯಕ್ತ ಎಚ್ಚರಿಕೆ ನೀಡುವವನೇ ಆಗಿ ದ್ದೇನೆ.

:52

ಇದೇ ರೀತಿ ಇವರಿಗಿಂತ ಮುಂಚಿನ ಜನಾಂಗ ಗಳ ಬಳಿಗೂ ಯಾವುದೇ ದೂತರು ಬಂದಾಗ ಅವರನ್ನು ಇವರು ಮಾಟಗಾರ ಅಥವಾ ಹುಚ್ಚ ಎಂದು ಹೇಳದೆ ಬಿಡಲಿಲ್ಲ.

:53

ಅದಕ್ಕೆ (ಹಾಗೆ ಹೇಳುವುದಕ್ಕೆ) ಅವರೇನು ಪರಸ್ಪರ ಒಪ್ಪಂದ ಮಾಡಿಕೊಂಡಿರುವರೇ? ಇಲ್ಲ. ವಾಸ್ತವ ದಲ್ಲಿ ಅವರು ಅತಿಕ್ರಮಿ ಜನತೆಯಾಗಿದ್ದಾರೆ.

:54

ಆದುದರಿಂದ (ಸಂದೇಶವಾಹಕರೇ,) ಅವರ ಬಗ್ಗೆ ನಿರ್ಲಕ್ಷ್ಯ ತಾಳಿರಿ. (ಅವರ ವಿಮುಖತೆಗೆ) ತಾವು ಆಕ್ಷೇಪಾರ್ಹರಲ್ಲ.

:55

ತಾವು ಉಪದೇಶ ಮಾಡಿರಿ. ಏಕೆಂದರೆ ನಿಜವಾಗಿಯೂ ಉಪದೇಶವು ಸತ್ಯವಿಶ್ವಾಸಿಗಳಿಗೆ ಫಲ ನೀಡುತ್ತದೆ.

:56

ನಾನು ಜಿನ್ನ್‍ಗಳನ್ನೂ ಮನುಷ್ಯರನ್ನೂ ನನ್ನ ಆರಾಧನೆಗಾಗಿಯೇ ಹೊರತು ಸೃಷ್ಟಿಸಲಿಲ್ಲ .

:57

ನಾನು ಅವರಿಂದ ಜೀವನಾಧಾರವನ್ನೇನೂ ಬಯಸುವುದಿಲ್ಲ ಮತ್ತು ಅವರು ನನಗೆ ಉಣಿಸಬೇಕೆಂದೂ ಆಗ್ರಹಿಸುವುದಿಲ್ಲ.

:58

ನಿಜವಾಗಿಯೂ ಅಲ್ಲಾಹನು ಮಹಾ ಅನ್ನದಾತನು , ಮಹಾಶಕ್ತಿಶಾಲಿ ಮತ್ತು ಪ್ರಚಂಡನೂ ಆಗಿರುವನು.

:59

ಆದುದರಿಂದ (ಇಂದು) ಅಕ್ರಮವೆಸಗಿದವರಿಗೆ (ಪೂರ್ವಿಕರಾದ) ತಮ್ಮ ಸಂಗಡಿಗರಿಗೆ ಸಿಕ್ಕಿದಂತಹ ಯಾತನೆಯ ಪಾಲು ಸಿದ್ಧವಿದೆ. ಆದ್ದರಿಂದ ಶಿಕ್ಷೆಗಾಗಿ ಅವರು ನನ್ನೊಡನೆ ಆತುರ ತೋರುವುದು ಬೇಡ.

:60

ಯಾವ ದಿನದ ಬಗ್ಗೆ ಎಚ್ಚರಿಸಲಾಗುತ್ತಿದೆಯೋ ಆ ದಿನ ಸತ್ಯನಿಷೇಧಿಗಳಿಗೆ ಕಠಿಣ ಶಿಕ್ಷೆಯಿದೆ.